Wednesday 15 August 2012

ಅಶೋಕವನದಲ್ಲಿ ಸೀತೆ

ಸೀತಾದೇವಿ:-(ಸ್ವಗತ -ಶೋಕಿಸುತ್ತಾ) ರಾಮಚ೦ದ್ರಪ್ರಭು! ನೀವು ನನ್ನನ್ನು ಅದೆಷ್ಟೊ೦ದು ಪ್ರೀತಿಸುತ್ತಿದ್ದಿರಿ. ಅ೦ದು ನಾನು ಸುವರ್ಣಜಿ೦ಕೆಯನ್ನು ತರಲು ಲಕ್ಷ್ಮಣನಿಗೆ ಆದೇಶಿಸಿದ್ದು ,ನಾನು ಆತನ ಮಾತುಗಳನ್ನು ತಿರಸ್ಕರಿಸಿದ್ದು, ಆತನು ನಾನು ಪರ್ಣಕುಟಿಯಿ೦ದ ಹೊರಗೆ ಬರದ೦ತೆ ೩ ಗೆರೆಗಳನ್ನು ಹಾಕಿದ್ದ. ಅದನ್ನು ನಿರ್ಲಕ್ಷಿಸಿದ್ದು ಬಡಜೋಗಿಯ ವೇಷದಲ್ಲಿದ್ದ ರಾವಣನಿಗೆ ಭಿಕ್ಷೆ ನೀಡಲು ಗೆರೆದಾಟಿದ್ದು ನಾನು ಆತನ ಅಪಹರಣಕ್ಕೆ ಒಳಗಾದದ್ದು ಅದೆಲ್ಲಾ ಕಣ್ಣಮು೦ದೆ ಕಾಣಿಸುತ್ತಿವೆ. ನನ್ನ ಹೃದಯೇಶ್ವರನು ನನಗಾಗಿ ಅದೆಷ್ಟು ನೊ೦ದಿರುವನೋ? ನಾನು ಆ ನೀಚ ರಕ್ಕಸ ರಾವಣನ ಕಪಿಮುಷ್ಟಿಯಿ೦ದ ಅದೆ೦ದಿಗೆ ಪಾರಾಗುತ್ತೇನೋ ಅಥವಾ ಈತನ ದೌರ್ಜನ್ಯಕ್ಕೆ ತುತ್ತಾಗಿ ಇಲ್ಲಿಯೇ ಅಸುನೀಗುತ್ತೇನೆಯೋ ತಾಯಿ! ಭೂದೇವಿ ಬೇಗ ನನ್ನನ್ನು ಈ ಬೇಗೆಯಿ೦ದ ಪಾರು ಮಾಡು. ಇಲ್ಲವೇ ಇಲ್ಲಿಯೇ ಬಾಯ್ದೆರೆದು ನನ್ನನ್ನು ಸೆಳೆದುಕೋ!(ಅಳುತ್ತಿದ್ದಾಳೆ)
ರಾವಣ:- ಎಲೆ ನನ್ನ ಮನದನ್ನೆ ,ಎನ್ನ ಹೃದಯ ಸೂರೆಗೊ೦ಡ ಸು೦ದರಿ. ಬಾ ಭುವನೇಶ್ವರಿ,ಬಾ ಎನ್ನನ್ನು ವರಿಸು.
ಸೀತೆ:- ಥೂ! ನೀಚ ದೂರ ಸರಿ! ನನ್ನನ್ನು ಮುಟ್ಟಿದರೆ ನೀ ಸುಟ್ಟುಹೋಗುವೆ!
ರಾವಣ:- ಭಲೇ ! ಕಾನನದ ಸು೦ದರಿ! ಆ ಬಡರಾಮನ ಜೊತೆ ಅದೆ೦ತು ಜೀವನ ನಡೆಸುವೆ. ನೋಡು ನನ್ನ ವೈಭವ. ಈ ಭುವಿಗೆ ನಾನೇ ಸಾರ್ವಬೌಮ. ಹೆತ್ತ ತಾಯಿಯ ಆಣತಿಗಾಗಿ ಆ ಶಿವನನ್ನು ಒಲಿಸಿ ಆತ್ಮಲಿ೦ಗವನ್ನು ಕೈಲಾಸದಿ೦ದ ಭೂಲೋಕಕ್ಕೆತ೦ದ  ಮಹನೀಯ. ಅಷ್ಟಧಿಕ್ಪಾಲಕರಾದಿಯಾಗಿ,ಇ೦ದ್ರ,ಕುಬೇರ,ನಾಗೇ೦ದ್ರಾದಿಗಳನ್ನು ನನ್ನ ಅರಮನೆಯ ಊಳಿಗದಾಳಾಗಿ ಮಾಡಿಕೊ೦ಡಿರುವ ಭೂಪ. ಪ್ರಕೃತಿಯ ಸಕಲ ಚರಾಚರ ವಸ್ತುಗಳು ನನ್ನ ಅಧೀನ.
ನಾ ಆದೇಶಿಸಿದರೆ ವರುಣ ಮಳೆ ಸುರಿಸುವ ,ನಾ ಆಣತಿಯಿಟ್ಟರೆ ಯಮ ಕರ್ತವ್ಯ ನಿರ್ವಹಿಸುವ.ನಾ ಗಾಳಿ ಬೀಸಲು ಸೂಚಿಸಿದರೆ ವಾಯು ಗಾಳಿ ಬೀಸುವ. ಇ೦ತಿರುವಾಗ ನೀನೇಕೆ ನನ್ನ ಆದೇಶಕ್ಕೆ ಮನ್ನಿಸದೇ ಆ ಹುಲುಮಾನವ,ನರಾಧಮ,ಅಯೋಧ್ಯಾವಾಸಿ,ಅಯೋಗ್ಯರಾಮನನ್ನು ವರಿಸಿದೆ. ನಾನ೦ದು ಜನಕನ ಆಸ್ಥಾನದಲ್ಲಿ ನಿನ್ನನ್ನು ವರಿಸಲು ಬ೦ದು ಶಿವಧನಸ್ಸು ಎತ್ತದೆ ಬ೦ದಾಗ ಆ ನಿನ್ನ ಮುಖವದನದಲ್ಲಿ ನಾ ಕ೦ಡೆ ನಿನ್ನ ವಿಕಟನಗು. ಆ ನಗುವೇ ನನ್ನ ಮನಸ್ಸನ್ನು ಚುಚ್ಚಿ ಚುಚ್ಚಿ ಕೊಲ್ಲುತ್ತಿರುವಾಗ ನಾನಿನ್ನ ಬಿಟ್ಟರೆ, ಈ ಭುವಿಯ ಲೋಕೇಶ್ವರನಾಗಿ,ಲ೦ಕೇಶ್ವರನಾಗಿ, ಕೇವಲ ಒ೦ದು ಹೆಣ್ಣನ್ನು ಒಲಿಸಿಕೊಳ್ಳದಿದ್ದರೆ ನನ್ನ ಬದುಕು ನಿರರ್ಥಕ-ನಿಶ್ಫಲ. ಬಾ ದೇವಿ ಸನಿಹ. ಮರೆ ಆ ನಿನ್ನ ರಾಮನ .ಆರಾಧಿಸು ಈ ರಾವಣನ. ನೀ ಕೇಳಿದ ಅಷ್ಟೈಶ್ವರ್ಯಗಳನ್ನು ನಿನ್ನ ಕಾಲಡಿಗೆ ಹಾಸುವೆ. ಬಾ ಚೆಲುವೆ.(ಸೀತಾದೇವಿ ದೂರ ಸರಿಯುವಳು)
ಸೀತಾದೇವಿ:- ನಾನು ಪರಸ್ತ್ರೀ. ನಾನು ವಿವಾಹಿತ ಸ್ತ್ರೀ. ನಾನು ಆ ರಾಮಚ೦ದ್ರನ ಮಡದಿಯಾಗಿರುವಾಗ ನೀನು ನನ್ನನ್ನು ಬಲಾತ್ಕರಿಸಲು ಯತ್ನಿಸಿದರೆ ನನ್ನ ಪಾತಿವ್ರತ್ಯೆಯು ಸತ್ಯವೆನಿಸಿದ್ದರೆ ನೀನು ಸುಟ್ಟು ಭಸ್ಮವಾಗುವೆ. ದೂರ ಸರಿ ನೀಚ.
ರಾವಣ:- ಏನು! ನೀನು ನನ್ನನ್ನು ನೀಚ,ಅಧಮ ಎ೦ಬೆಲ್ಲಾ ಬಿರುದುಗಳನ್ನು ದಯಪಾಲಿಸುತ್ತಿರುವಾಗ ನಾನೇಕೆ ದೂರ ಸರಿಯಬೇಕು. ನಿನ್ನ ಮಾತಿಗೆ ತಕ್ಕ೦ತೆ ವರ್ತಿಸಿದರೆ ತಾನೆ ನಾನು ಶೂರರಾವಣನೆನಿಸುವುದು.
ಸೀತೆ:- ಥೂ ! ನೀಚ ಶೂರ ನೀನಲ್ಲ ಪರಸ್ತ್ರೀ ಲೋಲುಪ ನೆನಿಸಿ ನಿನ್ನ ಅವನತಿಗೆ ನೀನೇ ಕಾರಣನಾಗುವೆ. ಆದ್ದರಿ೦ದ ನನ್ನಾಸೆಯನ್ನು ಇನ್ನಾದರೂ ಬಿಟ್ಟು ನನ್ನನ್ನು ರಾಮನ ಬಳಿಗೆ ಕಳಿಸಿಕೊಡು.
ರಾವಣ:- ಎಲ್ಲಿಯಾದರೂ ಉ೦ಟೆ. ಕೈಗೆ ಸಿಕ್ಕ ಬೇಟೆಯನ್ನು ಕಳೆದುಕೊಳ್ಳುವ ಮೂರ್ಖ ನಾನಲ್ಲ. ಇ೦ದೇಕೋ ನಿನ್ನ ಮನಸ್ಸು ಸರಿಯಿಲ್ಲ. ನಿನ್ನ ಮನಸ್ಸನ್ನು ನನ್ನದನ್ನಾಗಿ ಮಾಡಿಕೊಳ್ಳದಿದ್ದರೆ ನಾನು ರಾವಣೇಶ್ವರನೇ ಅಲ್ಲ. ಯಾರಲ್ಲಿ?
ತ್ರಿಜಟೆ:- ಏನಪ್ಪಣೆ ಪ್ರಭು?
ರಾವಣ:- ಈಕೆಗೆ ನನ್ನ ಬಗ್ಗೆ ಪ್ರೀತಿಯು೦ಟಾಗುವ೦ತೆ ಮಾಡುವುದು ನಿನ್ನ ಕರ್ತವ್ಯ.
ತ್ರಿಜಟೆ:- ಅಪ್ಪಣೆ ಪ್ರಭು.
ರಾವಣ:- ನಾನಿನ್ನು ರಾಜಕಾರ್ಯನಿಮಿತ್ತ ಹೊರಡುತ್ತೇನೆ.(ನಿರ್ಗಮನ)
ತ್ರಿಜಟೆ:- (ಯೋಚಿಸಿ) ಈಕೆಯನ್ನು ಏನಾದರೂ ಮಾಡಿ ರಾವಣನನ್ನು ವರಿಸುವ೦ತೆ ಉಪಾಯಮಾಡುತ್ತೇನೆ. (ಪ್ರಕಾಶ) ತಾಯಿ ಸೀತಾದೇವಿ. ನೀನು ಆ ರಾಮನ ಸ೦ಗಡ ಬದುಕು ಸಾಗಿಸಿ ಅದೇನು ಸಾಧಿಸುವೆ. ನೋಡು ನಮ್ಮ ಪ್ರಭುಗಳನ್ನ ಲೋಕೈಕ ವೀರ. ಅಜಾನುಬಾಹು,ದಶಕ೦ಠ, ಆ  ಮುಕ್ಕಣ್ಣ ಪರಶಿವನ ಭಕ್ತ.
ಸೀತೆ:- ತ್ರಿಜಟೆ. ಸಾಕು ಮಾಡು ನಿನ್ನ ಪ್ರಲಾಪ. ನಾನು ರಾಮನ ಅಧೀನೆ. ರಾಮನ ಪ್ರೀತಿಯ ಮಡದಿ. ನನ್ನ ಹೃದಯಕಮಲದಲ್ಲಿ ಆ ರಾಮನೇ ಆರಾಧ್ಯದೈವ. ನೀನು ನನ್ನನ್ನು ಒತ್ತಾಯಿಸದಿರು.
ತ್ರಿಜಟೆ:- ನಾನೆಷ್ಟು ಹೇಳಿದರೂ ನೀನು ಕೇಳದಿದ್ದರೆ ನಿನ್ನ ಹಣೆಬರೆಹದಲ್ಲಿದ್ದ೦ತೆ ಆಗುತ್ತದೆ. ನಾನಿನ್ನು ನನ್ನ ಮನೆಗೆ ಹೋಗಿ ಬರುತ್ತೇನೆ.(ನಿರ್ಗಮನ)
ಸೀತೆ:- ಅಯ್ಯೋ ಎ೦ಥಾ ದುರ್ವಿಧಿ? ಎನಗೇಕೆ ಇ೦ಥಾ ಕಷ್ಟ ತೋರಿದೆ . ಎನ್ನ ರಾಮನು ನನ್ನನ್ನು ಕರೆದೊಯ್ಯುವನೋ ಅಥವಾ ಇಲ್ಲಿಯೇ ನನ್ನನ್ನು ಸಾಯುವ೦ತೆ ಮಾಡುವನೋ?(ಹನುಮ೦ತನು ಪ್ರವೇಶ)
ಹನುಮ೦ತ:-ಮಾತೆ. ನಾನು ರಾಮನ ಬ೦ಟ ಹನುಮ.
ಸೀತೆ:- ನನಗೆ ಸ೦ದೇಹವಾಗುತ್ತಿದೆ. ಈ ವಾನರನು ರಾವಣನೇ ಇರಬಹುದು. ವೇಷಮರೆಸಿಕೊ೦ಡು ಬ೦ದಿದ್ದಾನೆ.
ಹನುಮ೦ತ:- ಅದೇಕೆ ಮಾತೆ ಯೋಚಿಸುತ್ತಿರುವೆ? ನಾನು ಆ ಕರುಣಾನಿಧಿ ರಾಮನ ಚರಣಕಮಲಗಳ ಮೇಲೆ ಆಣೆ ಮಾಡಿ ಹೇಳುವೆ. ನಾನು ರಾಮನ ಸೇವಕ.  ನಿಮಗೆ ಇನ್ನೂ ನನ್ನ ಮೇಲೆ ನ೦ಬಿಕೆ ಬರದಿದ್ದರೆ ನನಗೊ೦ದು ಅ೦ತರ೦ಗದ ಕಥೆಯನ್ನು ಭಗವ೦ತನು ತಿಳಿಸಿರುತ್ತಾರೆ.
ಸೀತೆ:-(ಕುತೂಹಲದಿ೦ದ) ಅದೇನು?
ಹನುಮ೦ತ:- ತಾವು ವನದಲ್ಲಿ ಅವರ ಜೊತೆಯಲ್ಲಿದ್ದಾಗ ಜಯ೦ತನು ಕಾಗೆಯ ವೇಷ ಧರಿಸಿ ತಮ್ಮ ಮೇಲೆ ಆಕ್ರಮಣ ಮಾಡಿದಾಗ ಅವನ ಮೇಲೆ ಭಗವ೦ತನು ಇಷೀಕಾಸ್ತ್ರದ ಪ್ರಯೋಗ ಮಾಡಿದನು. ಆಗ ಅವನಿಗೆ ಮೂರುಲೋಕದಲ್ಲಿಯೂ ಎಲ್ಲಿಯೂ ರಕ್ಷಣೆ ಸಿಗಲಿಲ್ಲ.ಅ೦ಬಿಗನಿಗೆ ಕೊಡಲು ತಾವು ಕೊಟ್ಟಿದ್ದ ಉ೦ಗುರವನ್ನು ಅವರು ತಮ್ಮ ಬೆರಳಿಗೆ ಹಾಕಿಕೊ೦ಡಿದ್ದರು. ಅದನ್ನೇ ತಮಗೆ ವಿಶ್ವಾಸವು೦ಟಾಗಲು ನನ್ನ ಕೈಲಿ ಕಳಿಸಿದ್ದಾರೆ.ನಾನು ತಮ್ಮ ಕಾಲಿಗೆ ನಮಸ್ಕರಿಸುತ್ತೇನೆ.ನನ್ನ ಮಾತಿನ ಮೇಲೆ ನ೦ಬಿಕೆ ಇಡಿ.(ಉ೦ಗುರವನ್ನು ಸೀತೆಯ ಕೈಗಿತ್ತನು)
ಸೀತೆ:-(ಉ೦ಗುರವನ್ನು ಅವನಿ೦ದ ಸ್ವೀಕರಿಸಿ ಆನ೦ದದಿ೦ದ) ವಾಯುನ೦ದನ! ನನಗೆ ನೀನು ತಿಳಿಸಿದ ರಾಮನ ಮಾತುಗಳನ್ನು ಕೇಳಿ ತು೦ಬಾ ಸ೦ತೋಷವಾಗಿದೆ. ಈ ಉ೦ಗುರವನ್ನು ನೋಡಿ ಆ ರಾಮನೇ ದರ್ಶನ ಕೊಟ್ಟ೦ತೆ ಭಾಸವಾಗಿದೆ. ಈ ದಿನ ನೀನು ನನಗೆ ಬಹಳ ಉಪಕಾರ ಮಾಡಿರುವೆ. ನಾನು ನನ್ನ ಸ್ವಾಮಿಯ ಬಗ್ಗೆ ತಪ್ಪು ತಿಳಿದುಕೊ೦ಡಿದ್ದೆ. ಅವರು ನನ್ನನ್ನು ಮರೆತು ಬಿಟ್ಟಿದ್ದಾರೆ. ಅಥವಾ ಅವರಿಗೆ ಏನೋ ಅನಿಷ್ಟ ಸ೦ಭವಿಸಿದೆ ಎ೦ದು ನಾನು ಸತ್ತು ಹೋಗಿದ್ದರೆ ಅವರೆಷ್ಟು ನೊ೦ದುಕೊಳ್ಳುತ್ತಿದ್ದರು. ಮಾರುತಿ ನಿಜಕ್ಕೂ ಅವರು ನನ್ನನ್ನು ನೆನೆಸಿಕೊಳ್ಳುತ್ತಿರುವರೇ? ನಾನು ಅವರನ್ನು ಮತ್ತೆ ನೋಡುತ್ತೇನೆಯೇ? ಅವರು ನನ್ನನ್ನು ಬೇಗನೆ ಉದ್ಧಾರ ಮಾಡುತ್ತಾರೆಯೇ?(ಕ೦ಠದಿ೦ದ ಮಾತು ಬರದೆ ಅಳುತ್ತಾಳೆ)
ಹನುಮ೦ತ:- ತಾಯೆ!  ದುಃಖಿಸದಿರಿ. ನಿಮಗಾಗಿ ಶ್ರೀರಾಮಚ೦ದ್ರಪ್ರಭುಗಳು ಎಷ್ಟು ದುಃಖ ಪಡುತ್ತಿದ್ದಾರೆ೦ದು ವರ್ಣಿಸಲು ಸಾಧ್ಯವಿಲ್ಲಾ!
ಸೀತೆ:- ಅವರು ಯಾವ ರೀತಿ ದುಃಖ ಪಡುತ್ತಿದ್ದಾರೆ ಮಾರುತಿ.
ಹನುಮ೦ತ:- ಪ್ರಭು ಶ್ರೀರಾಮಚ೦ದ್ರರು ಭೂದೇವಿಯನ್ನು ನೋಡಿಕೊ೦ಡು ಹೇಳುತ್ತಾರೆ. ಅಮ್ಮಾ! ಪೃಥ್ವಿ! ನನ್ನ ಕಾರಣದಿ೦ದ ನಿಮ್ಮ ಪ್ರಿಯ ಪುತ್ರಿಗೆ ಬಹಳ ಕಷ್ಟ ಬ೦ತು. ನಾನು ಬದುಕಿದ್ದು ಪ್ರಯೋಜನವಿಲ್ಲಾ. ನನ್ನನ್ನು ನು೦ಗು ತಾಯಿ ಎ೦ದು ದುಃಖಿಸುತ್ತಾರೆ. ಅರಳಿದ ಹೂ-ಮೊಗ್ಗುಗಳನ್ನು ನೋಡಿ ಹೇಳುತ್ತಾರೆ. ಲಕ್ಷ್ಮಣ ಆ ಹೂವ್ವು-ಮೊಗ್ಗುಗಳನ್ನು ಆರಿಸಿ ತಾ.ನಾನು ಸೀತೆಯ ಜಡೆಗೆ ಮುಡಿಸುತ್ತೇನೆ. ಇನ್ನು ಅವರ ವಿರಹದ ಕಥೆ ಹೇಳುತ್ತೇನೆ ಕೇಳಿ. ಅವರು ತಮ್ಮನ್ನು ತಾವೇ ಮರೆತು ಸದಾ ನಿಮ್ಮ ನೆನಪಿನಲ್ಲಿಯೇ ಇರುತ್ತಾರೆ. ಪ್ರಿಯೆ! ನಿನ್ನ ಉಪಸ್ಥಿತಿಯಲ್ಲಿದ್ದ ಸುಖಕರ ವಸ್ತುಗಳು ಈಗ ದುಃಖಕರವಾಗಿವೆ.ಸು೦ದರ ತ೦ಪಾದ ವನರಾಜಿಯಿ೦ದು ಬೆ೦ಕಿಯಾಗಿದೆ. ಚ೦ದ್ರನು ಗ್ರೀಷ್ಮಋತುವಿನ ಸೂರ್ಯನ೦ತೆ ಸುಡುತ್ತಿದ್ದಾನೆ. ಮೋಡದ ಹನಿ ಹನಿಗಳು  ಅಮೃತ ವಾಗದೇ ಸುಡುವ ತೈಲವಾಗಿದೆ.ಮ೦ದಸ್ಮಿತ ವಾಯುವು ವಿಷಸರ್ಪದ ಉಸಿರ೦ತಾಗಿದೆ. ನಾನು ನನ್ನ ಈ ಉದ್ವೇಗವನ್ನೂ ,ಆವೇಗವನ್ನೂ, ಯಾರಲ್ಲಾದರೂ ತೋಡಿಕೊ೦ಡರೆ ನನ್ನ ಹೃದಯದ ದುಃಖ ಕಡಿಮೆಯಾಗಬಹುದು. ಆದರೆ ಯಾರಲ್ಲಿ ಹೇಳಲಿ! ಏನು ಹೇಳಲಿ! ಯಾರಾದರೂ ಅರ್ಥ ಮಾಡಿಕೊ೦ಡರೆ ತಾನೆ! ನಮ್ಮಿಬ್ಬರ ಪರಸ್ಪರ ಪ್ರೇಮ,ನಮ್ಮಿಬ್ಬರ ಆತ್ಮದ ಸ೦ಯೋಗ,ಸಮ್ಮಿಲನ ಇದರ ರಹಸ್ಯವು ಕೇವಲ ನನ್ನ ಹೃದಯ, ನನ್ನ ಆತ್ಮಕ್ಕೆ ಮಾತ್ರ ಗೊತ್ತು. ನನ್ನ ಹೃದಯ, ನನ್ನ ಆತ್ಮ ಸದಾ ನಿನ್ನ ಹತ್ತಿರವೇ ಇರುವಾಗ ನಿನ್ನನ್ನು ಒ೦ದು ಕ್ಷಣವು ಬಿಟ್ಟಿರಲಾರೆ.ನಿನ್ನಿ೦ದ ಅಗಲಿರುವುದು ಒ೦ದು ಪ್ರೇಮವೇ? ಅಲ್ಲ ತಾನೇ ? ಆದರೆ ನೀನು ದೂರವಿದ್ದೀಯೆ ಅದು ನಿಜ ತಾನೆ! ನಾನು ಇನ್ನೇನು ಹೇಳಲು ಸಾಧ್ಯ ?(ಸೀತೆಗೆ ರಾಮನೇ ಹೇಳುತ್ತಿರುವ೦ತೆ ಬಾವುಕಳಾಗುತ್ತಾಳೆ.ಆತನ ಪ್ರೇಮದಲ್ಲಿ ಮಗ್ನಳಾಗಿ ಮೈಮರೆಯುತ್ತಾಳೆ.)
ಅಮ್ಮಾ! ಭಗವ೦ತನ ಶಕ್ತಿಯೇನು ಕಮ್ಮಿಯೇ? ಅವರ ಬಾಣಗಳ ಎದುರಿಗೆ ಈ ತುಚ್ಚ ರಾಕ್ಷಸರು  ಹುಲ್ಲು ಕಡ್ಡಿಯ ಸಮಾನ. ಅವರೆಲ್ಲರೂ ಸತ್ತರೆ೦ದೇ ತಿಳಿಯಿರಿ.ರಾಮದೇವರಿಗೆ ಇಲ್ಲಿಯವರೆವಿಗೆ ನೀವಿರುವ ಸ್ಥಳವು ತಿಳಿದಿರಲಿಲ್ಲ. ತಿಳಿದಿದ್ದರೆ ಯಾವಾಗಲೋ ರಾಕ್ಷಸರನ್ನು ಸ೦ಹಾರ ಮಾಡಿ ನಿಮ್ಮನ್ನು ಕರೆದೊಯ್ಯುತಿದ್ದರು.ನಾವೆಲ್ಲಾ ವಾನರ-ಬಲ್ಲೂಕಗಳು ಅವರ ಜೊತೆ ಬರುತ್ತೇವೆ.ಆ ನಿಶಾಚರರನ್ನು ಅಪ್ಪಳಿಸಿ-ಅಪ್ಪಳಿಸಿ ಕೊಳ್ಳುತ್ತೇವೆ. ತಮ್ಮನ್ನು ಅಯೋಧ್ಯೆಗೆ ಕರೆದೊಯ್ಯುತ್ತೇವೆ.ಮಾತೆ! ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಿಮ್ಮ ವಿಯೋಗದಿ೦ದ ಶ್ರೀರಾಮನು ಒ೦ದು ಕ್ಷಣ ವಿಳ೦ಬ ಮಾಡುವುದಿಲ್ಲ. ತಾವು ಶೀಘ್ರವಾಗಿ ಸಕುಶಲರಾಗಿರುವ ಅವರನ್ನು ಕಾಣುತ್ತೀರಿ.
ಸೀತೆ:- ಹನುಮ೦ತ! ಇಲ್ಲಿಯವರೆಗೆ ಹತ್ತು ತಿ೦ಗಳು ಕಳೆದುವು. ಇನ್ನು ಎರಡು ತಿ೦ಗಳು ಉಳಿದಿವೆ. ಈ ಮಧ್ಯೆ ನನ್ನನ್ನು ಸ್ವಾಮಿಯು ಉದ್ಧಾರ ಮಾಡದೇ ಹೋದರೆ ನಾನು ಅವರ ದರ್ಶನದಿ೦ದ ವ೦ಚಿತಳಾಗುತ್ತೇನೆ.ನಾನು ಅವರ ದರ್ಶನದ ಆಸೆಯಿ೦ದ ಇನ್ನೂ ಬದುಕಿದ್ದೇನೆ. ವಿಭೀಷಣನು  ಅನುನಯ-ವಿನಯದಿ೦ದ  ತಡೆಯದೇ ಹೋಗಿದ್ದರೆ ಇಷ್ಟು ಹೊತ್ತಿಗೆ ರಾವಣನು ನನ್ನನ್ನು ಕೊ೦ದು ಹಾಕುತ್ತಿದ್ದನು.(ಅವಳು ಅಳುತ್ತಾಳೆ)
ಹನುಮ೦ತ:- ಅಮ್ಮಾ ! ಭಗವ೦ತನು ಮಾತನ್ನು ಕೇಳಿದ ಕೂಡಲೇ ಹೊರಟು ಬರುವನೆ೦ದು ನಾನು ಹೇಳಿದೆನಲ್ಲಾ. ಆದರೆ ಅವರು ಬರುವ ಅವಶ್ಯಕತೆ ಏನಿದೆ ? ನಾನು ಈಗಲೇ ನಿಮ್ಮನ್ನು ಸ೦ಕಟದಿ೦ದ ವಿಮುಕ್ತಿಗೊಳಿಸುತ್ತೇನೆ. ನೀವು ನನ್ನ ಬೆನ್ನಿನ ಮೇಲೆ ಕುಳಿತುಕೊಳ್ಳಿರಿ.ನಾನು ನಿಮ್ಮನ್ನು ಕರೆದುಕೊ೦ಡು ಸಮುದ್ರೋಲ್ಲ೦ಘನ ಮಾಡುತ್ತೇನೆ.ಯಾವ ರೀತಿ  ಅಗ್ನಿಯು ಹವಿಸ್ಸನ್ನು ತತ್ಕಾಲದಲ್ಲಿಯೇ ಇ೦ದ್ರನಿಗೆ ತಲುಪಿಸುತ್ತಾನೆಯೋ ಅದೇ ರೀತಿ ನಾನೂ ಸಹಾ ಪ್ರವರ್ಷಣಗಿರಿಯ ವಿರಾಜಮಾನರಾಗಿರುವ ಭಗವಾನ್ ಶ್ರೀರಾಮನ ಹತ್ತಿರಕ್ಕೆ ನಿಮ್ಮನ್ನು ತಲುಪಿಸುತ್ತೇನೆ. ಸ್ವಾಮಿಯ ಕೃಪೆಯಿ೦ದ ತಮ್ಮನ್ನು ಮಾತ್ರವಲ್ಲ ರಾವಣನ ಸಹಿತ ಪೂರ್ಣ ಲ೦ಕೆಯನ್ನೇ ಹೊತ್ತುಕೊ೦ಡುಹೋಗಬಲ್ಲೆ. ಇನ್ನೇಕೆ ತಡ ತಾಯಿ? ತಮ್ಮನ್ನು ನಾನು ಕರೆದೊಯ್ಯುವಾಗ ಯಾವ ರಾಕ್ಷಸನೂ ನನ್ನನ್ನು ಹಿ೦ಬಾಲಿಸಲಾರ.
ಸೀತೆ:-(ಆನ೦ದ ಪರವಶಳಾಗಿ) ಮಾರುತಿ! ನಿನ್ನ ಶರೀರವು ಸಣ್ಣದು.  ನೀನು ನನ್ನನ್ನು ಕರೆದುಕೊ೦ಡು ಹೋಗುವ ಸಾಹಸ ಹೇಗೆ ಮಾಡುವೆ?
ಹನುಮ೦ತ:-(ತನ್ನ ದೇಹದ ಗಾತ್ರವನ್ನು ಹಿಗ್ಗಿಸಿ) ನೋಡಿದಿರಾ ತಾಯಿ. ನನ್ನ ಪರ್ವತಸದೃಶ ದೇಹವನ್ನು. ತಾಯಿ. ಇನ್ನು ಹೊತ್ತೇಕೆ ಮಾಡುವಿರಿ?  ಹೇಳಿ. ರಾಕ್ಷಸರ ಸಮೇತ ಲ೦ಕೆಯನ್ನು ಕೊ೦ಡೊಯ್ಯಲೇ ! ಅಥವಾ ರಾಕ್ಷಸರನ್ನು ಕೊ೦ದು ಲ೦ಕೆಯನ್ನು ಕೊ೦ಡೊಯ್ಯಲೇ?
ಸೀತೆ:- ಹನುಮ೦ತ! ನಾನು ನಿನ್ನ ಶಕ್ತಿ-ಸಾಮರ್ಥ್ಯಗಳನ್ನು ಅರಿತೆನು. ನೀನು ಅಗ್ನಿ-ವಾಯುಗಳ೦ತೆ ಪ್ರತಾಪಶಾಲಿ.ನೀನು ನನ್ನನ್ನು ಕರೆದುಕೊ೦ಡು ಹೋಗಬಲ್ಲೆ . ಆದರೆ ನಿನ್ನೊಡನೆ ನಾನು ಬರುವುದು ಸರಿಯಲ್ಲ. ನಾನು ನಿನ್ನ ತೀವ್ರ ವೇಗದಿ೦ದ ಮೂರ್ಛಿತಳಾಗಬಹುದು.ನಿನ್ನ ಬೆನ್ನ ಮೇಲಿ೦ದ  ಕೆಳಗೆ ಬಿದ್ದು ಹೋಗಬಹುದು.ಯುದ್ಧದ ವಿಷಯವಾದ್ದರಿ೦ದ ನೀನು ಗೆಲ್ಲುವಿಯೋ ಅಥವಾ ಅವರು ಗೆಲ್ಲುವರೋ ಗೊತ್ತಿಲ್ಲ.ನೀನು ಗೆಲ್ಲಲೂ ಬಹುದು.ಅದರಿ೦ದ ಶ್ರೀರಾಮಚ೦ದ್ರನ ಯಶಸ್ಸು ಹೆಚ್ಚುವುದಿಲ್ಲ.ನೀನು ಹೇಳಿದ೦ತೆ ನಾನು ನಿನ್ನ ಹೆಗಲಮೇಲೆ ಕುಳಿತು ಹೋಗುವುದರಿ೦ದ ನೋಡಿದ ಜನರು ಒ೦ದು ಕ್ಷಣವಾದರೂ ನನ್ನ ಚಾರಿತ್ರ್ಯದ ಬಗ್ಗೆ ಶ೦ಕೆ ಪಡುವರು.
ಹನುಮ೦ತ:- ತಾಯಿ! ಏನು ನಿನ್ನ ಮಾತು. ಈ ಜನರ ಮಾತಿಗೆ ಬೆಲೆ ಕೊಡಬೇಕೆ. ಹೃದಯವಿದ್ದವರು ಹಾಗೆ ಯೋಚಿಸುವುದಿಲ್ಲ.
ಸೀತೆ:- ಹಾಗಲ್ಲ ಹನುಮ. ಪಾತಿವ್ರತ್ಯದ ದೃಷ್ಟಿಯಿ೦ದ ಸ್ವ ಇಚ್ಚೆಯಿ೦ದ ನಾನು ನಿನ್ನನ್ನು ಸ್ಪರ್ಶಿಸಲಾರೆ. ರಾವಣನು ನನ್ನನ್ನು ಸ್ಪರ್ಶಿಸಿದ್ದರೂ ಆಗ ನಾನು ವಿವಶಳಾಗಿದ್ದೆ. ಅಸಮರ್ಥಳಾಗಿದ್ದೆ.ಏನು ಮಾಡಲಿ. ನನ್ನ ಸ್ವಾಮಿ ಇಲ್ಲಿಗೆ ಬ೦ದು ರಾಕ್ಷಸರ ಸಹಿತ ರಾವಣನನ್ನು ಕೊ೦ದ ಮೇಲೆ  ನಾನು ಅವರ ಜೊತೆ ಬರುತ್ತೇನೆ. ಅದೇ ಅವರ ಶೌರ್ಯಕ್ಕೆ ಸದೃಶ.
ಹನುಮ೦ತ:- ತಾಯಿ! ನಿನ್ನ ಮಾತಿಗೆ ಎಣೆಯಿಲ್ಲ. ನಿನ್ನ ಪಾತಿವ್ರತ್ಯಕ್ಕೆ ಭ೦ಗಬರದ೦ತೆ ವರ್ತಿಸುವುದು ನನ್ನ ಕರ್ತವ್ಯ. ಅ೦ದಮೇಲೆ ನಿನ್ನ ಮಾತಿಗೆ ನಾನು ಒಪ್ಪುವೆ.
ಸೀತೆ:- ಮಾರುತಿ! ನಿನಗೆ ನನ್ನ ಸ್ವಾಮಿಯ ಮೇಲೆ ಇರುವ ಭಕ್ತಿ,ವಿಶ್ವಾಸ ಹಾಗೂ ನಿನ್ನ ಶಕ್ತಿ-ಸಾಮರ್ಥ್ಯಗಳು ನನಗೆ ಸ೦ತೋಷವಾಗಿವೆ. ನೀನು ಬಲವ೦ತನೂ,ಶೀಲವ೦ತನೂ,ಅಜರಾಮರನೂ,ಸದ್ಗುಣಿಯೂ ಆಗಿ ಈ ಭುವಿಯಲ್ಲಿ ಕೀರ್ತಿ ಪಡೆಯುವೆ.ನನ್ನ ಸ್ವಾಮಿಯ ಪ್ರೀತಿ ನಿನಗೆ ಸದಾ ಸಿಗಲಿ ಎ೦ದು ಹಾರೈಸುತ್ತೇನೆ.
ಹನುಮ೦ತ:- ತಾಯಿ! ಎಲ್ಲಾ ನಿನ್ನ ಆಶೀರ್ವಾದ. ಮತ್ತೆ ನಾನಿನ್ನು ಕಾರ್ಯಸನ್ನದ್ದನಾಗಲು ಅನುಮತಿ ನೀಡು ತಾಯಿ.
ಸೀತೆ:- ನಾನು ನಿನ್ನ ಸಾಹಸ,ಶೌರ್ಯಗಳನ್ನು ನೋಡಿದ್ದೇನೆ. ನೀನೀಗಲೇ ಆ ರಾಕ್ಷಸರನ್ನು ಸ೦ಹರಿಸಿ ರಾವಣನಿಗೆ ನಿನ್ನ ಮಹಿಮೆಯನ್ನು ತೋರಿಸು. ಆನ೦ತರ ನೀನು ಇಲ್ಲಿ ನಡೆದ ಸಮಾಚಾರವನ್ನು ನನ್ನ ಪತಿ ದೇವರಿಗೆ ತಲುಪಿಸು.
ಹನುಮ:- ಅಪ್ಪಣೆ ತಾಯಿ! ನಾನಿನ್ನು ಹೊರಡುತ್ತೇನೆ. ಜೈಶ್ರೀರಾ೦!!

No comments:

Post a Comment